ಸಮುದ್ರತೀರದಿಂದ ಕಾಣುವ ಈ ಪಶ್ಚಿಮಘಟ್ಟಗಳ ಸಾಲಿನ ದೃಶ್ಯವೇ ಅದ್ಭುತ! ಒಂದೆಡೆ ಹಸುರಾದ ಮರಗಿಡಗಳನ್ನು ಹೊತ್ತ ಬೆಟ್ಟ. ಇನ್ನೊಂದೆಡೆಯಲ್ಲಿ ವಿಶಾಲವಾದ ಜಲರಾಶಿ. ಅದನ್ನು ನೋಡುತ್ತ ಕುಳಿತರೆ ಬೇರೆ ಯಾವ ಜಗತ್ತೂ ನೆನಪಿಗೆ ಬರುವುದಿಲ್ಲ. ಹೊರಗಡೆ ಕಾಣುವುದು ನಮ್ಮ ಅಂತರಂಗವೇ ಆಗಿದೆ. ಒಂದು ಕಡೆ ಪ್ರಕ್ಷುಬ್ಧವಾದ, ಚಂಚಲತೆಯಿಂದ ಕೂಡಿದ ಹೊಯ್ದಾಡುವ ತೆರೆಗಳು, ಇನ್ನೊಂದು ಕಡೆ, ಅಚಲವಾಗಿ, ಭೂಮಿಯನ್ನೇ ಸ್ಥಿರವಾಗಿ ಹಿಡಿದುಕೊಂಡಿರುವ ಪರ್ವತರಾಶಿ. ಒಂದು ಕಡೆ ಮನಸ್ಸಿನಲ್ಲೂ ಹೀಗೇ ಹೊಯ್ದಾಟ, ಅದೆಲ್ಲಕ್ಕೂ ಬೆನ್ನು ಮಾಡಿ ನಿಂತರೆ ಬೆಟ್ಟದಷ್ಟು ಗಟ್ಟಿತನ! ಯಾವುದು ಸತ್ಯ, ನಾವು ಯಾವುದರ ಕಡೆ ಮುಖ ಮಾಡಿ ನಿಂತಿದ್ದೇವೋ ಅದೇ ಸತ್ಯ!" "ಸಹ್ಯಾದ್ರಿಯ ಸೆರೆಯಲ್ಲಿ" ಇದು ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ನಡೆದ ಮಲೆನಾಡಿನ ಸಣ್ಣ ಹಳ್ಳಿಗಳ ಕೆಲವು ವ್ಯಕ್ತಿಗಳ ಜೀವನ, ಅವರ ಅಂತರಂಗದ ತುಮುಲಗಳ ಜೊತೆಯಲ್ಲಿ ಸಾಗುವ ಕಥೆ. ಆ ಕಾಲದ ಸಾಮಾಜಿಕ- ಸಾಂಸ್ಕೃತಿಕ ಪರಿಸರದ ಹಿನ್ನೆಲೆಯಲ್ಲಿ ಒಂದೆರಡು ವರ್ಷಗಳ ಕಾಲಘಟ್ಟದಲ್ಲಿ ನಡೆಯುವ ಬದಲಾವಣೆಗಳು, ಅದರಿಂದ ಅವರ ಜೀವನದಲ್ಲಿ ನಡೆದ ಘಟನೆಗಳ ಚಿತ್ರಣ. ಆತ್ಮೀಯರ ಅಗಲುವಿಕೆ. ಜೀವನಾನುಭವದಿಂದ ಬದಲಾಗುವ ಮನಸ್ಥಿತಿಗಳು, ಸ್ವಾತಂತ್ರ್ಯಸಂಗ್ರಾಮದ ಬಿಸಿ, ಹಳ್ಳಿಯ ಜನರ ನಂಬಿಕೆಗಳು, ಸಂಪ್ರದಾಯವನ್ನು ಮೀರುವ ಕ್ರಾಂತಿಕಾರಕ ಮನೋಭಾವ, ಪಟ್ಟಣದ ಜೀವನ. ನಾಟಕರಂಗದ ಅನುಭವಗಳು ಹೀಗೆ ಹತ್ತಾರು ಸ್ತರಗಳಲ್ಲಿ. ಮಲೆನಾಡಿನ ಹಳ್ಳಿಯಿಂದ ಬೊಂಬಾಯಿ-ಬೆಂಗಳೂರುಗಳ ತನಕ ಹರಿಯುತ್ತಾ ಆ ಕಾಲವನ್ನು ಅನ್ವೇಷಿಸುತ್ತದೆ ಈ ಕಾದಂಬರಿ.