ಸ್ವಾತಂತ್ರ್ಯ ಬಂದ ಬಳಿಕ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷಕ್ಕೆ ಭಾರತ ದೇಶವನ್ನು ಮುನ್ನಡೆಸುವ, ಜಗತ್ತಿನಲ್ಲೇ ಸ್ವಾಭಿಮಾನ ಸಂಪನ್ನ, ಶಕ್ತಿಯುತ ರಾಷ್ಟ್ರವನ್ನಾಗಿ ರೂಪಿಸುವ ಎಲ್ಲ ಬಗೆಯ ಮುಕ್ತ ಅವಕಾಶಗಳೂ ಇದ್ದವು.
ಪಂ. ಜವಾಹರಲಾಲ್ ನೆಹರು, ಇಂದಿರಾಗಾಂಧಿಯವರು ಮನಸ್ಸು ಮಾಡಿದ್ದರೆ ಜಾಗತಿಕ ಸ್ಥಾನ-ಮಾನ, ಘನತೆ ಗೌರವ ತಂದುಕೊಡಬಹುದಿತ್ತು. ಆದರೆ ಕುಟುಂಬ ರಾಜಕೀಯ, ಸ್ವಜನಪಕ್ಷಪಾತ, ವಿರೋಧಿಗಳ ದಮನ, ಸ್ವಾರ್ಥಕೇಂದ್ರಿತ ಆಡಳಿತ - ಇವುಗಳಿಂದಾಗಿ, ಸ್ವಾತಂತ್ರ್ಯ ಬಂದು ಆರು ದಶಕಗಳೇ ಸಂದರೂ ಭಾರತ ದಾರಿದ್ರ್ಯಾ, ಅಜ್ಞಾನ, ಸ್ವಾಭಿಮಾನಶೂನ್ಯತೆಗಳಿಂದ ಮೇಲೆದ್ದು ನಿಲ್ಲಲೇ ಇಲ್ಲ. ಬಿಜೆಪಿಯ ಮೈತ್ರಿಕೂಟ ಎನ್ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ನಿಧಾನವಾಗಿಯಾದರೂ ಭಾರತ ಮೈಕೊಡವಿ ಮೇಲೆದ್ದು ಅಭಿವೃದ್ಧಿಪಥದತ್ತ ಧಾವಿಸತೊಡಗಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಕಳೆದ ಹತ್ತು ವರ್ಷಗಳಲ್ಲಿ ಜಗತ್ತೇ ಭಾರತದತ್ತ ಬೆರಗುಗಣ್ಣಿಂದ ನೋಡುವಂತಾಗಿರುವುದನ್ನು ವಿರೋಧಿಗಳೂ ಒಪ್ಪಬೇಕಾಗುತ್ತದೆ.
ಬಿಜೆಪಿ ಈ ಎತ್ತರಕ್ಕೆ ಬೆಳೆದಿದ್ದಾದರೂ ಹೇಗೆ? ಯಾವುದೇ ಶ್ರಮವಿಲ್ಲದೆ ರಾತ್ರೋರಾತ್ರಿ ಬೆಳೆದು ನಿಂತಿತೆ?