ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ ಎಂದು ಅಧಿಕಾರಕ್ಕೆ ಹಪಹಪಿಸಿದ ಮಹಾನ್ ಮಹಾನ್ ನಾಯಕರ ಕಣ್ಣೆದುರೇ ಭಾರತ ದೇಶ ತುಂಡಾಯಿತು. ದೇವರಿಂದ ರಚಿತವಾದ ಭಾರತವನ್ನು ಮನುಷ್ಯ ಮಾತ್ರನು ತುಂಡರಿಸಲಾರ ಎಂದಿದ್ದ ಮಹಾತ್ಮ ಗಾಂಧೀಜಿಯೇ ವಿಭಜನೆಗೆ ಒಪ್ಪಿಗೆ ಕೊಟ್ಟಿದ್ದರು.
ಸ್ವಾತಂತ್ರ್ಯ ವೀರರ ಹಾಗೂ ನಾಡಿನ ಮಹಾಜನತೆಯ ಆಶೋತ್ತರಗಳೆಲ್ಲಾ ಕಮರಿಹೋಗಿ ಮಹಾ ದುರಂತವೊಂದು ಜರುಗಿಯೇ ಹೋಯಿತು. ವೇದಗಳ ತವರೂರು ಸಿಂಧ್, ಮಾತೃಭೂಮಿಯ ಸ್ವಾತಂತ್ರ್ಯಕ್ಕೆ ನೇಣಿನ ಕುಣಿಕೆಗೆ ಮುತ್ತಿಕ್ಕಿ ನೇಣುಗಂಬವನ್ನೇರಿದ ವೀರ ಭಗತ್ಸಿಂಗ್ನ ಜನ್ಮಸ್ಥಳ ಲಾಹೋರ್ ಪರಕೀಯವಾಯಿತು.
‘ನೆಹರು ಮತ್ತು ಪಟೇಲ್ಗೆ ನಮ್ಮ ಕಡೆಯಿಂದ ಈ ಟ್ರೈನ್ ಸ್ವಾತಂತ್ರ್ಯದ ಉಡುಗೊರೆ’ ಎಂದು ರೈಲಿನ ಬೋಗಿಗೆ ಬೋರ್ಡ್ ತೂಗುಹಾಕಿ, ಹಿಂದೂ-ಸಿಖ್ಖರ ಹೆಣಗಳನ್ನು ರೈಲಿನಲ್ಲಿ ತುಂಬಿ ಪಾಕಿಸ್ತಾನ ಭಾರತಕ್ಕೆ ಕಳುಹಿಸಿತ್ತು. ಒಂದು ವರದಿಯಂತೆ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಅಮಾಯಕರು ಬಲಿಯಾದರು.
ಇದರೊಂದಿಗೆ ಗಾಂಧಿಹತ್ಯೆ! ಗಾಂಧಿ ಹತ್ಯೆಗೆ ಗೋಡ್ಸೆ ಒಂದು ನೆಪಮಾತ್ರ! ಆದರೆ ಹತ್ಯೆಗೆ ಕಾರಣವಾದದ್ದು ಮತಾಂಧರ ಘೋರ ಹಿಂಸಾಚಾರದಲ್ಲಿ ನೊಂದು-ಬೆಂದು ಅಳಿದುಳಿದ ಕೋಟಿ ಕೋಟಿ ನಿರಾಶ್ರಿತರ ಆಕ್ರೋಶಭರಿತ ಆರ್ತನಾದ! ಈ ಎಲ್ಲಾ ನೋವುಗಳ ಅಂತರಂಗದ ಬಹಿರಂಗವೇ ‘ಗಾಂಧಿ ಹತ್ಯೆಯ ಸತ್ಯ’ ನಾಟಕ, ಸತ್ಯದ ಮಹಾಸ್ಫೋಟ!!