ಅದೊಂದು ಶಕ್ತಿ. ಮಿಂಚಿನ ಸೆಳಕು. ಭಾರತದ ಆಗಸದಲ್ಲಿ ಕೋರೈಸಿದ ಸಿಡಿಲಮರಿ. ಭಾರತಾಂಬೆಯ ಚೈತನ್ಯವನ್ನು ಜಗದಗಲ ಪರಿಚಯಿಸಿದ ಬ್ರಹ್ಮಕ್ಷತ್ರಿಯ. ಕಾವಿಬಟ್ಟೆಯಲ್ಲಿ ಉದಿಸಿದ ಕ್ರಾಂತಿಕಾರಿ.
ಸ್ವಾಮಿ ವಿವೇಕಾನಂದರು ಯುಗಕ್ಕೊಮ್ಮೆ ಅವತರಿಸುವ ದಿವ್ಯಪ್ರಸಾದ. ಅವರು ಶ್ರೀ ರಾಮಕೃಷ್ಣರ ಸಂಪರ್ಕಕ್ಕೆ ಬಂದುದು, ತಾಯಿ ಶಾರದಾದೇವಿಯ ಆಶೀರ್ವಾದ ಪಡೆದುದು, ದೂರದ ಚಿಕಾಗೋದಲ್ಲಿ ನಡೆಯುತ್ತಿದ್ದ ವಿಶ್ವಧರ್ಮಸಮ್ಮೇಳನಕ್ಕೆ ಹೋಗಲು ಪ್ರೇರಣೆ ಪಡೆದುದು, ಭಾರತದ ಉದ್ದಗಲಕ್ಕೆ ಓಡಾಡಿ, ಅಕ್ಷರಶಃ ಪರಿವ್ರಾಜಕರಾಗಿ ಜನಮಾನಸವನ್ನು ಅರಿತದ್ದು ಇದೆಲ್ಲವೂ ಪವಾಡಸದೃಶ. ಅಷ್ಟು ಚಿಕ್ಕ ಜೀವನದಲ್ಲಿ ಇಷ್ಟೆಲ್ಲವನ್ನು ಮಾಡಲು ಸಾಧ್ಯವೇ ಎಂದರೆ, ಚಿಕ್ಕದಿದ್ದುದು ಆಯುಸ್ಸು ಮಾತ್ರ, ಜೀವನವಲ್ಲ - ಎಂಬ ಸಂದೇಶವಾಗಿ ಬದುಕಿದವರು ಸ್ವಾಮಿ ವಿವೇಕಾನಂದರು. ಅವರು ಹೋದಲ್ಲಿ ಮಿಂಚಿನ ಸಂಚಾರ, ಅವರು ನುಡಿದಲ್ಲಿ ಅಮೃತಬಿಂದು. ವಿವೇಕಾನಂದರು ಕೊಲಂಬೋದಿಂದ ಅಲ್ಮೋರದವರೆಗೆ ಭಾರತದ ನೆಲದಲ್ಲಿ ಓಡಾಡಿದರು. ಜನರಲ್ಲಿ ಆತ್ಮಶಕ್ತಿಯನ್ನು ಉದ್ದೀಪಿಸಿದರು. ಸ್ವಾತಂತ್ರ್ಯಹೋರಾಟದಲ್ಲಿ ತನ್ನದೇ ಆದ ಯೋಗದಾನ ಮಾಡಿದರು. ನಿರಂತರವಾಗಿ ಉಪನ್ಯಾಸವಿತ್ತರು. ಬರೆದರು, ಮಠ ಕಟ್ಟಿದರು. ಮುಂದೆ ಹುಟ್ಟಿಬಂದ ಸಹಸ್ರಾರು ಬಾಳುಗಳಿಗೆ ಬೆಳಕಾದರು. ಅವರೊಂದು ಸ್ವಯಂಪ್ರಭೆಯ ದಿವ್ಯಮಣಿ!
ಸ್ವಾಮಿ ವಿವೇಕಾನಂದರ ಕುರಿತು ಕನ್ನಡದ ಹಿರಿಯ ಚಿಂತಕ, ವಾಗ್ಮಿ ಡಾ. ಜಿ.ಬಿ. ಹರೀಶ ಅವರು ಬರೆದಿರುವ ಅಪರೂಪದ ಕೃತಿ ಇದು.