ಮಹಿಷಾಸುರಮರ್ದಿನಿ-ಮಹಿಷಮಂಡಲ ಕುರಿತ ಸಂಶೋಧನೆಯನ್ನು ಲೇಖಕರು ಪ್ರಾರಂಭಿಸಿದ್ದು 2015ರಲ್ಲಿ. ನಂತರ ಅದು ಅನೇಕ ಹಂತಗಳನ್ನು ಹಾದು ಈಗ ಕೃತಿರೂಪದಲ್ಲಿ ಕನ್ನಡ ಜನತೆಯ ಮುಂದೆ ಬರುತ್ತಿದೆ. ಮಹಿಷಾಸುರಮರ್ದಿನಿಯ ಆರಾಧನೆಯ ಮೂಲ, ಬೆಳವಣಿಗೆ, ಮಹಿಷಮಂಡಲದ ಸ್ಥಾನ ನಿಷ್ಕರ್ಷೆ - ಇತ್ಯಾದಿ ವಿಷಯಗಳನ್ನು ಈ ಕೃತಿಯು ವಿಸ್ತೃತವಾಗಿ ಚರ್ಚಿಸುತ್ತದೆ. 2500 ವರ್ಷಗಳಿಂದ ಭಾರತದಲ್ಲಿ ಇರುವ ಶಕ್ತಿ ಆರಾಧನೆ ಹಾಗೂ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಇದನ್ನು ಹೋಲುವ ಇನ್ನಿತರ ಶಕ್ತಿ ಆರಾಧನಾ ಪದ್ಧತಿಗಳ ಕುರಿತು ಈ ಕೃತಿಯಲ್ಲಿ ಮಾಹಿತಿಗಳಿವೆ.
ಮಹಿಷಮಂಡಲ ಮತ್ತು ಮೈಸೂರು ಭಿನ್ನ ಸ್ಥಳಗಳೆ? ಮಹಿಷಾಸುರನೆಂಬುದು ವ್ಯಕ್ತಿಯೆ-ಸಂಕೇತವೆ? ಚಾಮುಂಡೇಶ್ವರಿಯನ್ನೇ ಮಹಿಷಾಸುರಮರ್ದಿನಿ ಎನ್ನುತ್ತೇವೆಯೆ? ಕಾವೇರಿ ನದಿ ಕರ್ನಾಟಕವಲ್ಲದೆ ಬೇರೆಡೆ ಇದೆಯೆ? ಇತ್ಯಾದಿ ಹತ್ತುಹಲವು ಸಂಶಯ, ಪ್ರಶ್ನೆ, ಜಿಜ್ಞಾಸೆಗಳಿಗೆ ಈ ಕೃತಿಯು ಅತ್ಯಂತ ತಲಸ್ಪರ್ಶಿ ಸಂಶೋಧನಾಧಾರಿತ ಉತ್ತರಗಳನ್ನು ಕೊಡುವ ಪ್ರಯತ್ನ ಮಾಡುತ್ತದೆ. ವಿದ್ವತ್ ವಲಯ ಮತ್ತು ಜನಸಾಮಾನ್ಯರೆಂಬ ಎರಡು ವರ್ಗಗಳನ್ನೂ ಗಮನದಲ್ಲಿರಿಸಿಕೊಂಡು, ಐತಿಹಾಸಿಕ ದೃಷ್ಟಿಯ ಈ ಸಂಶೋಧನ ಕೃತಿಯನ್ನು ರಚಿಸಲಾಗಿದೆ.