ಬೆಂಗಳೂರಿನಲ್ಲಿ 1956ರಲ್ಲಿ ಒಂದು ಘೋರ ಹತ್ಯಾಕಾಂಡ ನಡೆಯಿತು. ಅದು ಬೇಲೂರು ಶ್ರೀನಿವಾಸ ಅಯ್ಯಂಗಾರ್ ಅವರ ಇಡೀ ಮನೆತನದ, ಎಲ್ಲ ಸದಸ್ಯರ ಕೊಲೆ. ಒಂದೇ ರಾತ್ರಿಯಲ್ಲಿ ಆ ಬಂಗಲೆಯ ಸೊಂಟದೆತ್ತರದ ನಾಯಿಯಿಂದ ಹಿಡಿದು, ಅಯ್ಯಂಗಾರರ ಮನೆಯ ಹಸುಗೂಸಿನ ತನಕ ಎಲ್ಲರ ಕೊಲೆ ನಡೆದು ಹೋಯಿತು. ಕೇಜಿಗಟ್ಟಲೆ ಚಿನ್ನ, ಬೆಳ್ಳಿ, ಒಡವೆ ಲೂಟಿಯಾಯಿತು. ಇಡೀ ರಾಜ್ಯದಲ್ಲೇ ಸಂಚಲನ ಉಂಟುಮಾಡಿದ ಹತ್ಯಾ ಪ್ರಕರಣವದು. ಏಕೆಂದರೆ ಬೇಲೂರು ಶ್ರೀನಿವಾಸ ಅಯ್ಯಂಗಾರರು ಖ್ಯಾತ ಕ್ರಿಮಿನಲ್ ವಕೀಲರು, ಅಂದಿನ ಮೈಸೂರು ಪ್ರಜಾ ಪರಿಷತ್ನ ಸದಸ್ಯರೂ, ಸಮಾಜದಲ್ಲಿ ಗಣ್ಯರೂ, ಕಾನೂನಿನಲ್ಲಿಪಂಡಿತರೂ, ಶ್ರದ್ಧಾವಂತ ಬ್ರಾಹ್ಮಣರೂ ಆಗಿದ್ದರು. ಅವರಿಗೆ ಮನೆ ತುಂಬ ಮಕ್ಕಳು, ಎಲ್ಲಕೊಲೆಯಾಗಿ ಹೋದರೂ, ಒಬ್ಬ ಹುಡುಗಿ ಉಳಿದುಕೊಂಡು ಬಿಟ್ಟಳು. ಕೊಲೆಯ ಭೀಭತ್ಸ ಕಂಡ ಹುಡುಗಿ ಮಾನಸಿಕವಾಗಿ ಘಾಸಿಗೊಂಡಳಾ? ಆಕೆ ಕೆಲಕಾಲ ಗಂಡಸಿನ ವೇಷ ತೊಟ್ಟು ಓಡಾಡುತ್ತಿದ್ದಳಂತೆ ಎಂಬ ಮಾತೂ ಕೇಳಿ ಬಂತು.
ಹಳೆಯ ದಾಖಲೆಗಳನ್ನೆಲ್ಲ ತಡಕಿ ಶ್ರೀನಿವಾಸ ಅಯ್ಯಂಗಾರರ ಪೂರ್ವತಿಹಾಸ ಬಗೆದು, ಹಂತಕರ ಊರಿಗೂ ಹೋಗಿ, ಅಲ್ಲಿ ಇನ್ನೂ ಬದುಕಿರುವ ಅವರ ಸಂಬಂಧಿಗಳನ್ನು ಮಾತನಾಡಿಸಿ, ಎಲ್ಲಕ್ಕಿಂತ ಮುಖ್ಯವಾಗಿ ಹಂತಕರನ್ನು ಬಂಧಿಸಿ ಅವರು ನೇಣುಗಂಬವೇರುವಂತೆ ಮಾಡಿದ ದಕ್ಷ ಪೊಲೀಸ್ ಅಧಿಕಾರಿಯನ್ನೂ ಮಾತನಾಡಿಸಿ ಅಪಾರವಾದ ಇಂಟರೆಸ್ಟಿಂಗ್ ಹಾಗೂ ಥ್ರಿಲ್ಲಿಂಗ್ ವಿವರಗಳನ್ನು ಸಂಗ್ರಹಿಸಿ, ಕ್ರೋಢೀಕರಿಸಿ ಪ್ರಕಟಿಸಿದ ಪುಸ್ತಕವಿದು.
ಇಷ್ಟಾಗಿ ಕೊನೆಗೆ ಉಳಿಯುವ ಪ್ರಶ್ನೆಯೆಂದರೆ ಕ್ರಿಮಿನಲ್ ವಕೀಲರಾದ ಬೇಲೂರು ಶ್ರೀನಿವಾಸ ಅಯ್ಯಂಗಾರರೇ ಕೊಲೆ, ದರೋಡೆಗಳನ್ನು ಮಾಡಿಸುತ್ತಿದ್ದರಾ? ಒಂದು ಗುಕ್ಕಿನಲ್ಲಿ ಓದಿಕೊಳ್ಳಬಹುದಾದ ಪುಸ್ತಕವಿದು.